10 ನೇ ತರಗತಿ ಪ್ರಥಮ ಭಾಷೆ ಕನ್ನಡ ಗಧ್ಯ-6
| ವ್ಯಾಘ್ರಗೀತೆ | ಎ.ಎನ್.ಮೂರ್ತಿರಾವ್|
6. ವ್ಯಾಘ್ರಗೀತೆ
I ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಭಗವದ್ಗೀತೆಯನ್ನು ರಚಿಸಿದವರು ಯಾರು?
ಉ: ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ ವೇದವ್ಯಾಸರು.
2. ಹುಲಿಗೆ ಪರಮಾನಂದವಾಗಲು ಕಾರಣವೇನು?
ಉ: ಶಾನುಭೋಗರ ದುಂಡು ದುಂಡಾದ ಶರೀರವನ್ನು ಕಂಡು ಹುಲಿಗೆ ಪರಮಾನಂದವಾಯಿತು.
3. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?
ಉ: ಹಿಂದಿನಿಂದ ಹುಲಿ ಮೈಮೇಲೆ ಎರಗುವುದಿಲ್ಲ ಎಂದರಿತಿದ್ದ ಶಾನುಭೋಗರು ಅದಕ್ಕೆ ಬೆನ್ನು ತಿರುಗಿಸಿ ನಡೆಯುವುದು ಹುಲಿಯು ಅವರ ಮುಂಬಾಗಕ್ಕೆ ಬಂದು ಮೇಲೆರಗಬೇಕೆಂದು ಮಾಡುವ ಪ್ರಯತ್ನದ ಪುನರಾವರ್ತನೆ ಐದಾರು ಬಾರಿ ನಡೆದು ದಣಿವಾದ ಶಾನುಭೋಗರಿಗೆ ತಲೆಸುತ್ತಲಾರಂಭಿಸಿತು.
4. ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?
ಉ: ಶಾನುಭೋಗರ ಬ್ರಹ್ಮಾಸ್ತ್ರ ಅವರ ಬಳಿಯಲ್ಲಿದ್ದ ಖಿರ್ದಿ ಪುಸ್ತಕ.
5. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?
ಉ: ವಿಧಿ ತನ್ನ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಹಸಿದು ಮಲಗಿದ್ದ ಹುಲಿಯು ಯೋಚಿಸಿತು.
ಮೂರು - ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು?
ಉ: ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಚಿಕ್ಕನಾಯಕನ ಹಳ್ಳಿಯಲ್ಲಿರುವ ಖಜಾನೆಗೆ ಕಟ್ಟಿ ಅಲ್ಲಿದ್ದ ಸ್ನೇಹಿತರನ್ನು ನೋಡಿಕೊಂಡು ಶಾನುಭೋಗರು ವಾಪಸ್ಸು ಹೊರಡಬೇಕೆನ್ನುವಷ್ಟರಲ್ಲಿ ಸಂಜೆ ಆರು ಗಂಟೆಯಾಗಿತ್ತು.
ಅವರು ಮರಳಿ ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು. ಕಾಡು ದಾರಿ, ಆದರೂ ಬೆಳದಿಂಗಳ ದಿನ; ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು ಶಾನುಭೋಗರು ಯೋಚಿಸಿದರು.
2. ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು?
ಉ: ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವೆಂದು ಹುಲಿಯ ಅಭಿಪ್ರಾಯ.
3. ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ?
ಉ: ಚಿಕ್ಕನಾಯಕನಹಳ್ಳಿಗೆ ತೆಂಗಿನ ಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ ಹಳ್ಳಿಗೆ ಹಿಂದಿರುಗುತ್ತಿದ್ದರು. ಶಾನುಭೋಗರು ಬಿದ್ದ ಸ್ಥಳಕ್ಕೆ ಸ್ವಲ್ಪ ದೂರ ಇದ್ದಾಗ ಎತ್ತುಗಳು ಮುಂದೆ ಹೋಗದೆ ಅಲ್ಲೆ ನಿಂತುಬಿಟ್ಟವು. ಅಷ್ಟರಲ್ಲಿ ಹುಲಿಯ ಘರ್ಜನೆ ಕೇಳಿಸಿತು. ಎತ್ತುಗಳ ಘಂಟೆಯ ಧ್ವನಿ ಕೇಳಿ ಹುಲಿ ಕೆಲವು ನಿಮಿಷ ತಡೆಯಿತು. ಆದರೆ ರೈತರ ಮಾತು ಕೇಳಿ ಬಂದ ಮೇಲೆ ನಿರಾಶೆಯಿಂದಲೂ, ಕೋಪದಿಂದಲೂ ಘರ್ಜಿಸಿ ಪಲಾಯನ ಮಾಡಿತು. ಘರ್ಜನೆ ನಿಂತು ಸ್ವಲ್ಪ ಹೊತ್ತು ಕಳೆದ ಮೇಲೆ ರೈತರು ತಮ್ಮ ಬಳಿಯಿದ್ದ ಕೋವಿಯಿಂದ ಗುಂಡು ಹಾರಿಸಿ ಕೈಲಾದಷ್ಟು ಗಲಭೆ ಮಾಡುತ್ತ ತೆಂಗಿನ ಗರಿಯ ಪಂಜು ಹೊತ್ತಿಸಿಕೊಂಡು ಮುಂದೆ ಬಂದು ನೋಡಿದಾಗ ಶಾನುಭೋಗರು ಮೂರ್ಛೆಯಲ್ಲಿ ಬಿದ್ದಿದ್ದರು. ರೈತರು ಅವರ ಮುಖದ ಮೇಲೆ ನೀರೆರೆಚಿ ಎಚ್ಚರಿಸಿದರು.
ಎಂಟು - ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ?
ಉ: ಹುಲಿ ಪ್ರಾಣಿಗಳನ್ನು ಕೊಂದು ತಿನ್ನುವುದೇನೋ ಉಂಟು. ಆದರೆ ನಿಷ್ಪಕ್ಷಪಾತವಾದ ದೃಷ್ಟಿಯಲ್ಲಿ ನೋಡಿದರೆ ಅದರಲ್ಲಿ ತಪ್ಪೇನಿದೆ? ಶಾಕಾಹಾರವನ್ನು ತಿಂದು ಬದುಕಬೇಕಾದ ಮಾನವನೇ ಮಾಂಸವನ್ನು ತಿನ್ನಬಹುದಾದರೆ ಹುಲಿಯಲ್ಲಿ ಅದು ದೊಡ್ಡ ಅಪರಾದವಲ್ಲ. ಆದರೆ ಕೊಲ್ಲುವಾಗ ಧರ್ಮಾಧರ್ಮಗಳನ್ನು ಅನುಸರಿಸುತ್ತವೆಯೋ ಇಲ್ಲವೋ? ಶ್ರೀರಾಮನಂತ ದೊರೆಗಳು ಆಳಿದ, ಭಗವದ್ಗೀತೆಯಂತ ಗ್ರಂಥ ಉದ್ಭವಿಸಿದ ಭರತ ಭೂಮಿಯಲ್ಲಿ ಹುಲಿಗಳು ಅಧರ್ಮಕ್ಕೆಡೆ ಮಾಡಿಕೊಡಲಾರವು. ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ ಎಂದಿರಬಹುದು. ನಿಶ್ಯಬ್ದವಾಗಿ ಪ್ರಾಣಿಯ ಹಿಂದಕ್ಕೆ ನಡೆದು, ಅನಂತರ ಅವರ ಮುಂಭಾಗಕ್ಕೆ ನೆಗೆದು ಕೂಡಲೇ ತಿರುಗಿ ಪ್ರಾಣಿಯ ಮೇಲೆ ಬೀಳುತ್ತವೆ. ಖಂಡವಿದಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದಕೋ ಎಂದು ಹಸುವು ಹೇಳಿದರೂ ಬಾಯಿ ಚಪ್ಪರಿಸಿಕೊಂಡು ಹಸುವನ್ನು ತಿನ್ನದೆ ಸತ್ಯವ್ರತೆಯಾದ ಪುಣ್ಯಕೋಟಿಯನ್ನು ತಿನ್ನಲೊಲ್ಲದ ಹುಲಿರಾಯನ ಆ ಪವಿತ್ರ ಕಥೆ ಇಂದಿನ ಹುಲಿಗಳಿಗೆ ಆದರ್ಶ. ಆದ್ದರಿಂದ ಅವು ಅಧರ್ಮಕ್ಕೆ ಎಂದೂ ಕೈ ಹಾಕುವುದಿಲ್ಲ ಎಂದು ಮೂರ್ತಿರಾಯರು ಹುಲಿಯ ಬೇಟೆಯಾಡುವ ಬಗೆಯನ್ನು ವಿವರಿಸಿದ್ದಾರೆ.
2. ಶಾನುಭೋಗರನ್ನು ರಕ್ಷಿಸಿದುದು ಖಿರ್ದಿಪುಸ್ತಕವೇ? ಹುಲಿಯ ಧರ್ಮವೇ? ಸಮರ್ಥನೆಯೊಂದಿಗೆ ವಿವರಿಸಿ?
ಉ: ಶಾನುಭೋಗರಿಗೆ ಖಿರ್ದಿ ಪುಸ್ತಕ ಕೇವಲ ಜೀವನಾಧಾರವಲ್ಲ. ಅದು ಅವರ ರಾಜಭಕ್ತಿಯ ಲಾಂಛನ. ಖಜಾನೆಗೆ ರೈತರ ಕಂದಾಯದ ಹಣವನ್ನು ಕಟ್ಟಿ ಶಾನುಭೋಗರು ತಮ್ಮ ಹಳ್ಳಿಗೆ ಮರಳುತ್ತಿದ್ದ ಸಮಯದಲ್ಲಿ ಕಾಡಿನಲ್ಲಿ ಅವರು ಬರುತ್ತಿದ್ದಾಗ ಹುಲಿಯೊಂದು ಅವರನ್ನು ಬೇಟೆಯಾಡಲು ಹೊಂಚು ಹಾಕಿತು.
ಹುಲಿಗಳು ಹಿಂದಿನಿಂದ ಮೇಲೆ ಬೀಳುವುದಿಲ್ಲವೆಂದು ಅರಿತ್ತಿದ್ದ ಶಾನುಭೋಗರು ಉಪಾಯವಾಗಿ ಹುಲಿಗೆ ಬೆನ್ನು ತಿರುಗಿಸಿ ನಡೆದು ದಣಿದರು. ಆ ವಿಪತ್ತಿನ ಸನ್ನಿವೇಶದಲ್ಲಿ ಅವರಿಗೆ ನೆನಪಾಗಿದ್ದು ಅವರ ಬಳಿಯಿದ್ದ ಖಿರ್ದಿ ಪುಸ್ತಕ. ಅದು ಸಧ್ಯಕ್ಕೆ ಅವರ ಬಳಿಯಿದ್ದ ಬ್ರಹ್ಮಾಸ್ತ್ರ. ಅದರಿಂದ ಹುಲಿಯ ಮುಖಕ್ಕೆ ಬಡಿದಾಗ ಏನಾಯಿತೆಂದು ಅರಿಯಲು ಅದಕ್ಕೆ ಅರೆ ನಿಮಿಷ ಹಿಡಿಯಿತು. ಅದನ್ನೇ ಉಪಯೋಗಿಸಿಕೊಂಡು ಓಡಿದ ಅವರು ಕಲ್ಲು ಎಡವಿ ಬಿದ್ದು ಮೂರ್ಛೆ ಹೋದಾಗ ಅಷ್ಟರಲ್ಲಿ ಅಲ್ಲಿಗೆ ಬರುತ್ತಿದ್ದ ರೈತರಿಂದಾಗಿ ಹುಲಿಯಿಂದ ಬಚಾವಾದರು. ಅವರಿಗೆ ಆ ಅರೆ ನಿಮಿಷದ ಅವಕಾಶವನ್ನು ಒದಗಿಸಿ ಕೊಟ್ಟು ಪ್ರಾಣವನ್ನು ಕಾಪಾಡಿದ ಪುಸ್ತಕದ ಮೇಲೆ ಅವರಿಗೆ ಕೃತಜ್ಞತಾ ಭಾವ. ಖಿರ್ದಿಪುಸ್ತಕವೇ ತಮ್ಮ ಜೀವ ಉಳಿಸಿತು ಎಂಬುದು ಅವರ ನಂಬಿಕೆ. ಆದರೆ ನಿಜವಾಗಿ ನೋಡಿದರೆ ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ. ಹುಲಿಯ ಧರ್ಮಶ್ರದ್ಧೆಯಿಂದ. ಭರತ ಖಂಡದ ಹುಲಿಗಳ ಧರ್ಮಶ್ರದ್ಧೆ, ಹಿಂದಿನಿಂದ ದಾಳಿ ಮಾಡಿ ಕೊಲ್ಲದಿರುವ ಅವರ ಉದಾರ ಗುಣವೇ ಶಾನುಭೋಗರು ಹುಲಿಯಿಂದ ಪಾರಾಗಲು ಕಾರಣವಾಗಿದೆ.
ಸಂದರ್ಭದೊಂದಿಗೆ ಸ್ವಾರಸ್ಯವನ್ನು ಬರೆಯಿರಿ.
1. “ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ.”
ಉ: ಈ ಮೇಲಿನ ವಾಕ್ಯವನ್ನು ಎ.ಎನ್.ಮೂರ್ತಿರಾಯರು ಬರೆದ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಸಂಕಲನದಿಂದ ಆರಿಸಲಾದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಶಾನುಭೋಗರನ್ನು ಬೇಟೆಯಾಡಬೇಕೆಂದು ಹುಲಿ ಅವರನ್ನು ಹಿಂಬಾಲಿಸಿತು. ಆದರೆ ಹುಲಿಯ ಧರ್ಮಶ್ರದ್ಧೆಯ ಪ್ರಕಾರ ಅದು ಹಿಂದಿನಿಂದ ದಾಳಿ ಮಾಡುವ ಹಾಗಿರಲಿಲ್ಲ. ಇದನ್ನು ಅರಿತ್ತಿದ್ದ ಶಾನುಭೋಗರು ಆದಷ್ಟು ಅದಕ್ಕೆ ಬೆನ್ನು ಹಾಕಿ ನಡೆಯುತ್ತ ಅದರ ದಾಳಿಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಮೇಲೆ ಬಿದ್ದು ಬಿಡಲೆ ಎಂದು ಯೋಚಿಸಿದ ಹುಲಿಗೆ ತಾನು ಸದ್ವಂಶದಲ್ಲಿ ಜನಿಸಿದವನು ಎಂಬುದು ನೆನಪಾಯಿತು. “ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ.” ಎಂದು ಎದುರಿಗೇ ಬಂದು ಹಸು ಆಹ್ವಾನಿಸಿದರೂ ಸತ್ಯವ್ರತೆಯಾದ ಪುಣ್ಯಕೋಟಿಯನ್ನು ತಿನ್ನದೆ ತನ್ನ ಪ್ರಾಣವನ್ನೆ ತೊರೆದ ತನ್ನ ಅಜ್ಜನನ್ನು ಹುಲಿಯು ನೆನಪಿಸಿಕೊಂಡಿತು ಎಂದು ಲೇಖಕರು ವಿವರಿಸುವ ಸಂದರ್ಭದಲ್ಲಿ ಮೇಲಿನ ಮಾತು ಬಂದಿದೆ
ಸ್ವಾರಸ್ಯ: ಹುಲಿಯು ತನ್ನನ್ನು ತಿನ್ನುವುದೆಂಬ ಅರಿವಿದ್ದರೂ ಕೊಟ್ಟ ಮಾತಿನಂತೆ ಹುಲಿಗೆ ಆಹಾರವಾಗಲು ಬಂದ ಪುಣ್ಯಕೋಟಿ ಹಸುವಿನ ಪ್ರಾಮಾಣಿಕತೆ ಸತ್ಯ ಇಲ್ಲಿ ವ್ಯಕ್ತವಾಗಿದೆ.
2. “ಸ್ವಧರ್ಮೇ ನಿಧನಂ ಶ್ರೇಯ:”
ಉ: ಈ ಮೇಲಿನ ವಾಕ್ಯವನ್ನು ಎ.ಎನ್.ಮೂರ್ತಿರಾಯರು ಬರೆದ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಸಂಕಲನದಿಂದ ಆರಿಸಲಾದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಶಾನುಭೋಗರ ಮೇಲೆ ಹಿಂದಿನಿಂದ ಮೇಲೆ ಬಿದ್ದಾದರೂ ಅವರನ್ನು ಕೊಲ್ಲಬೇಕೆಂದು ಹುಲಿಯು ಒಂದು ಕ್ಷಣ ಆಲೋಚಿಸಿತು. ಆ ಸಂದರ್ಭದಲ್ಲಿ ಅದಕ್ಕೆ ಪುಣ್ಯಕೋಟಿಯ ಸತ್ಯತೆಯನ್ನು ಮೆಚ್ಚಿ ತನ್ನ ಪ್ರಾಣವನ್ನು ಬಿಟ್ಟ ತನ್ನ ವಂಶದ ಹಿರಿಯ ಹುಲಿಯು ನೆನಪಾಯಿತು. ಅಂತಹ ಹುಲಿಯ ಮೊಮ್ಮಗನಾಗಿ ಹುಟ್ಟಿ ತಾನು ಅಧರ್ಮಕ್ಕೆ ಕೈ ಹಾಕುವುದೆ, ಎಂದು ಆಲೋಚಿಸಿದ ಹುಲಿಗೆ ಭಗವದ್ಗೀತೆಯಲ್ಲಿ ಬಂದಿರುವ ಮೇಲಿನ ವಾಕ್ಯ ನೆನಪಾಯಿತು ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ಪಾಲಿಸಿದರೆ ಯಶಸ್ಸು ಸಿಗುವುದು. ಕುಲಧರ್ಮಕ್ಕೆ ಅಪಚಾರವೆಸಗಬಾರದು ಎಂಬ ತತ್ವ ಇಲ್ಲಿ ವ್ಯಕ್ತವಾಗಿದೆ.
3. “ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು.”
ಉ: ಈ ಮೇಲಿನ ವಾಕ್ಯವನ್ನು ಎ.ಎನ್.ಮೂರ್ತಿರಾಯರು ಬರೆದ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಸಂಕಲನದಿಂದ ಆರಿಸಲಾದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಶಾನುಭೋಗರು ಹುಲಿಗೆ ಬೆನ್ನು ಹಾಕಿ ಅದರ ಆಕ್ರಮಣವನ್ನು ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿ ನಡೆದು ನಡೆದು ಸುಸ್ತಾದರು. ಕೊನೆಗೆ ಅವರಿಗೆ ನೆನಪಾಗಿದ್ದು ಅವರ ಬಳಿಯಲ್ಲಿದ್ದ ಖಿರ್ದಿ ಪುಸ್ತಕ. ಅದನ್ನು ಪ್ರಯೋಗಿಸಿ ಅದರಿಂದ ಹುಲಿಯ ಗಮನ ಸ್ವಲ್ಪವಾದರೂ ಚಲಿಸಿದರೆ, ಅಷ್ಟರಲ್ಲಿ ಸಮೀಪದ ಮರಕ್ಕೆ ಹಾರಿ ಮೇಲಕ್ಕೇರಬಹುದೆಂದು ಯೋಚಿಸಿ ಪುಸ್ತಕವನ್ನು ಹುಲಿಯ ಮುಖಕ್ಕೆ ಬೀಸಿದರು. ಬಳಲಿಕೆಯಿಂದ ಜಡವಾಗಿದ್ದ ಮನಸ್ಥಿತಿಯಲ್ಲಿದ್ದ ಹುಲಿಗೆ ಏನಾಯಿತೆಂದು ಅರಿಯಲು ಅರೆನಿಮಿಷ ಬೇಕಾಯಿತು. ಆಗ ಶಾನುಭೋಗರು ಮೇಲಿನಂತೆ ಯೋಚಿಸುತ್ತಾ ಒಂದೇ ಉಸಿರಿನಲ್ಲಿ ಮರದ ಕಡೆ ಧಾವಿಸಿದರು.
ಸ್ವಾರಸ್ಯ: ಜೀವ ಉಳಿಸಿಕೊಳ್ಳಲು ಒಂದು ಅವಕಾಶ ಸಿಕ್ಕರೆ ಸಾಕು ಬದುಕಿದೆನಾದರೆ ಮುಂದೇನಾದರೂ ಸಾಧಿಸಬಹುದು ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.
4. “ನಾನು ಮುಖ ಮೇಲಾಗಿ ಬಿದ್ದಿದ್ದೇನೆ.”
ಉ: ಈ ಮೇಲಿನ ವಾಕ್ಯವನ್ನು ಎ.ಎನ್.ಮೂರ್ತಿರಾಯರು ಬರೆದ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಸಂಕಲನದಿಂದ ಆರಿಸಲಾದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಹುಲಿಯಿಂದ ತಪ್ಪಿಸಿಕೊಳ್ಳಬೇಕೆಂದು ಶಾನುಭೋಗರು ತಮ್ಮ ಬಳಿಯಿದ್ದ ಖಿರ್ದಿ ಪುಸ್ತಕವನ್ನು ಅದರ ಮುಖಕ್ಕೆ ಬೀಸಿದರು. ಅದು ಗಾಬರಿಯಾಗಿದ್ದ ಸಂದರ್ಭ ಬಳಸಿ ಓಡಿ ಹೋಗುತ್ತಿದ್ದಾಗ ಕಲ್ಲು ಎಡವಿ ಬಿದ್ದು ಮೂರ್ಛೆಹೋದರು. ಅಷ್ಟರಲ್ಲಿ ಅಲ್ಲಿಗೆ ರೈತರು ಬಂದಿದ್ದರಿಂದ ಹುಲಿ ಅಲ್ಲಿಂದ ಪಲಾಯನ ಮಾಡಿತು. ಆದರೂ ಶಾನುಭೋಗರ ಮನಸ್ಸಿನಲ್ಲಿ ಸಂಶಯವೊಂದು ಕಾಡುತ್ತಿತ್ತು. ನಿಸ್ಸಹಾಯಕರಾಗಿ ಪ್ರಜ್ಞೆಯಿಲ್ಲದೆ ಬಿದ್ದಾಗಲೂ ಹುಲಿ ಇವರನ್ನು ಏಕೆ ಎಳದೊಯ್ಯಲಿಲ್ಲ ಎಂದು ಯೋಚಿಸಿದ ಅವರು ಗಾಡಿಯವರನ್ನು ಮೇಲಿನಂತೆ ಕೇಳಿದರು. ಆದರೆ ಶಾನುಭೋಗರು ಬೆನ್ನು ಮೇಲಾಗಿ ಬಿದ್ದುದರಿಂದ ಹುಲಿಯು ತನ್ನ ಕುಲಧರ್ಮ ಪಾಲಿಸಿದ್ದರಿಂದ ಶಾನುಭೋಗರು ಹುಲಿಯಿಂದ ಪಾರಾಗಿದ್ದರು.
5. “ಹುಲಿ ಈಗ ಎಷ್ಟು ಹಸಿದಿರಬೇಕು”
ಉ: ಈ ಮೇಲಿನ ವಾಕ್ಯವನ್ನು ಎ.ಎನ್.ಮೂರ್ತಿರಾಯರು ಬರೆದ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಸಂಕಲನದಿಂದ ಆರಿಸಲಾದ ‘ವ್ಯಾಘ್ರಗೀತೆ’ ಎಂಬ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಬೇಟೆಯಾಡುವ ಉದ್ದೇಶದಿಂದ ತಮ್ಮನ್ನು ಹಿಂಬಾಲಿಸಿದ ಹುಲಿಯಿಂದ ತಪ್ಪಿಸಿಕೊಂಡ ಶಾನುಭೋಗರು “ಕುಡಿದ ನೀರು ಅಲುಗದ ಹಾಗೆ” ಅಲ್ಲದಿದ್ದರೂ ಜೀವ ಸಹಿತ ಮನೆ ಸೇರಿಕೊಂಡರು. ರಸದೂಟವನ್ನು ಮಾಡಿದರು. ಆ ಸಂದರ್ಭದಲ್ಲಿ ಅವರು ಹುಲಿಯನ್ನು ಮೇಲಿನಂತೆ ನೆನಪಿಸಿಕೊಂಡರು. ಸ್ವಾರಸ್ಯ: ಶಾನುಭೋಗರನ್ನು ತಿನ್ನಲು ಹುಲಿ ನಡೆಸಿದ ಹರಸಾಹಸ ವ್ಯರ್ಥವಾಗಿ ಕೊನೆಗೂ ಶಾನುಭೋಗರು ಮನೆ ಸೇರಿಕೊಂಡರು. ಅವರು ಊಟ ಮಾಡುವಾಗ ಸಹಜವಾಗಿ ತನ್ನಂತೆಯೇ ಹಸಿದ ಇನ್ನೊಂದು ಜೀವ ನೆನಪಾದುದು ಅವರೊಳಗೆ ಇದ್ದ ಮಾನವೀಯತೆಯ ಜೊತೆ ತಾನು ಹುಲಿಯಿಂದ ಬಚಾವಾಗಿ ಬಂದುದರ ಬಗ್ಗೆ ಅವರಿಗಿದ್ದ ಅಭಿಮಾನವನ್ನು ಸೂಚಿಸುವುದು
ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.
1. ಮಂತ್ರಿತ್ವ ಹೋಗಿ ಕೇವಲ ____ಮಾತ್ರ ಉಳಿದಿತ್ತು.
ಉತ್ತರ: ಶಾನುಭೋಗಿಕೆ
2. ಖಿರ್ದಿ ಪುಸ್ತಕ ____ಬ್ರಹ್ಮಾಸ್ತ್ರ.
ಉತ್ತರ: ಶಾನುಭೋಗರ
3. ನೆಲದಿಂದ ಮೇಲೆದ್ದುಕೊಂಡಿದ್ದ ____ಎಡವಿ ಶಾನುಭೋಗರು ಬಿದ್ದರು.
ಉತ್ತರ: ಕಲ್ಲನ್ನು
4. ರೈತರು ತಿಂಗಳ ಬೆಳಕಿನಲ್ಲಿ ____ಹೊಡೆಯುತ್ತಿದ್ದರು.
ಉತ್ತರ: ಗಾಡಿ
5. ಶಾನುಭೋಗರು ಉಳಿದಿದ್ದು ____ ಪುಸ್ತಕದಿಂದಲ್ಲ.
ಉತ್ತರ: ಖಿರ್ದಿ
ಭಾಷಾ ಚಟುವಟಿಕೆ
1. ತದ್ಧಿತಾಂತಗಳೆಂದರೇನು?
ಉ: ನಾಮಪದಗಳ ಮೇಲೆ ಬೇರೆ ಬೇರೆ ಅರ್ಥಗಳಲ್ಲಿ ಗಾರ, ಕಾರ, ಇಗ, ಅಡಿಗ, ವಂತ, ಇಕ ಮುಂತಾದ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳಾಗುತ್ತವೆ.
2. ತದ್ಧಿತಾಂತ ಭಾವನಾಮಗಳೆಂದರೇನು? ಉದಾ. ಕೊಡಿ.
ಉ: ಷಷ್ಠೀ ವಿಭಕ್ತ್ಯಂತ ನಾಮಪದಗಳ ಮುಂದೆ ಭಾವಾರ್ಥದಲ್ಲಿ –ತನ, ಇಕೆ, ಪು, ಮೆ ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತ ಭಾವನಾಮಗಳೆನಿಸುವುವು.
ಉದಾ:
ಜಾಣನ ಭಾವ – ಜಾಣತನ
ಚೆಲುವಿನ ಭಾವ – ಚೆಲುವಿಕೆ
ಕರಿದರ ಭಾವ – ಕಪ್ಪು
No comments:
Post a Comment