10 ನೇ ತರಗತಿ ಪ್ರಥಮ ಭಾಷೆ ಕನ್ನಡ ಗಧ್ಯ-7
| ವೃಕ್ಷಸಾಕ್ಷಿ | ದುರ್ಗಸಿಂಹ|
7. ವೃಕ್ಷಸಾಕ್ಷಿ
I ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. “ವೃಕ್ಷಸಾಕ್ಷಿ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ?
ಉ: ವೃಕ್ಷಸಾಕ್ಷಿ ಕತೆಯನ್ನು ದುರ್ಗಸಿಂಹ ಕವಿಯು ರಚಿಸಿದ ಕರ್ನಾಟಕ ಪಂಚತಂತ್ರಂ ಎಂಬ ಕೃತಿಯಿಂದ ಆರಿಸಲಾಗಿದೆ.
2. ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?
ಉ: ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಸಂಪತ್ತಿನ ಕಳ್ಳತನದ ಆರೋಪವನ್ನು ಹೊರಿಸಿದನು.
3. ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು?
ಉ: ಹೊನ್ನನ್ನು ಹೂತಿಟ್ಟ ಸ್ಥಳದಲ್ಲಿ ಮತ್ತು ಆ ಸಂದರ್ಭದಲ್ಲಿ ಧರ್ಮಬುದ್ಧಿ ಮತ್ತು ತನ್ನನ್ನು ಹೊರತುಪಡಿಸಿ ಮನುಷ್ಯರಾರೂ ಇರಲಿಲ್ಲ. ಆದ್ದರಿಂದ ಕದ್ದವರಾರು ಎಂದು ದುಷ್ಟಬುದ್ಧಿಯು ಹೇಳಿದಾಗ ಧರ್ಮಾಧಿಕರಣರು ವಿಸ್ಮಯ ಹೊಂದಿದರು.
4. ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?
ಉ: ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ದೇವ, ಗುರು, ಬ್ರಾಹ್ಮಣರ ಪೂಜೆಗಳನ್ನು ಮಾಡುತ್ತ ಕಳೆದನು.
5. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
ಉ: ಹೊನ್ನನ್ನು ಕದ್ದವರಾರು ಎಂದು ಸಾಕ್ಷ್ಯ ಕೇಳಲು ಧರ್ಮಾಧಿಕರಣರು ವಟ ವೃಕ್ಷದ ಸಮೀಪಕ್ಕೆ ಬಂದರು.
ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಧರ್ಮಬುದ್ಧಿಗೆ ದುಷ್ಟಬುದ್ಧಿಯು ಯಾವ ಸಲಹೆಯನ್ನಿತ್ತನು?
ಉ: ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಗಳಿಬ್ಬರೂ ವ್ಯಾಪಾರಕ್ಕೆ ಹೋಗಿ ಸಾಕಷ್ಟು ಹಣ ಸಂಪತ್ತು ಸಂಪಾದಿಸಿಕೊಂಡು ತಮ್ಮ ಜನ್ಮಭೂಮಿಗೆ ಮರಳಿ ಹೊರ ಉದ್ಯಾನವನದಲ್ಲಿದ್ದ ಸಂದರ್ಭದಲ್ಲಿ ಅದನ್ನು ಇಬ್ಬರೂ ಸಮ ಪಾಲು ಮಾಡಿಕೊಳ್ಳೋಣ ಎಂದು ಧರ್ಮಬುದ್ಧಿಯು ಹೇಳಿದಾಗ ಪಾಪಬುದ್ಧಿಯಿಂದ ಕೂಡಿದವನಾದ ದುಷ್ಟಬುದ್ಧಿಯು ನಾವು ಇಷ್ಟು ಹೊನ್ನನ್ನು ಮನೆಯಲ್ಲಿಟ್ಟು ಸ್ವೇಚ್ಛೆಯಿಂದ ಬಾಳಲು ಸಾಧ್ಯವಿಲ್ಲ ಮತ್ತೆ ವ್ಯಾಪಾರಕ್ಕೆ ಬೇರೆ ಊರಿಗೆ ಹೋಗಬೇಕಾದ್ದರಿಂದ ನಮ್ಮಿಬ್ಬರಿಗೂ ವೆಚ್ಚಮಾಡಲು ಎಷ್ಟು ಬೇಕೋ ಅಷ್ಟು ಹೊನ್ನನ್ನು ತೆಗೆದುಕೊಂಡು ಉಳಿದದ್ದನ್ನು ಇಲ್ಲಿಯೇ ಇಡೋಣ ಎಂದು ಸಲಹೆ ನೀಡಿದನು.
2. ದುಷ್ಟಬುದ್ಧಿಯು ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು?
ಉ: ಹೊನ್ನು ಹೇಗೆ ನಾಪತ್ತೆಯಾಯಿತು ಎಂಬುದನ್ನು ಅಲ್ಲಿದ್ದ ವಟವೃಕ್ಷವೊಂದೇ ಹೇಳಲು ಸಾಧ್ಯ ಎಂದು ಧರ್ಮಾಧಿಕರಣರು ವೃಕ್ಷಸಾಕ್ಷಿಯನ್ನು ಕೇಳುವಂತೆ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದ ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತನ್ನ ತಂದೆಯ ಕೈಯನ್ನು ಹಿಡಿದು ಯಾರೂ ಇಲ್ಲದಂತಹ ಸ್ಥಳಕ್ಕೆ ಕರೆತಂದು ನಡೆದ ವೃತ್ತಾಂತವೆಲ್ಲವನ್ನೂ ವಿವರಿಸಿ ಹೇಳಿ ನಿಮ್ಮ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲ ದೂರವಾಗಿ ಹಲವು ಕಾಲದವರೆಗೆ ಹಸಿಯದೆ ಉಂಡು ಬಾಳುವಷ್ಟು ಹಣವು ಬರುವುದು. ನೀವು ಆ ಮರದ ಪೊಟರೆಯಲ್ಲಿ ಅಡಗಿದ್ದು ಧರ್ಮಬುದ್ಧಿಯೇ ಹೊನ್ನೆಲ್ಲವನ್ನೂ ತೆಗೆದುಕೊಂಡನೆಂದು ನುಡಿಯಿರಿ ಎಂದನು.
3. ಧರ್ಮಾಧಿಕರಣರು ವಟವೃಕ್ಷಕ್ಕೆ ಏನು ಹೇಳಿದರು?
ಉ: ಕಳೆದು ಹೋಗಿರುವ ಸಂಪತ್ತು ಕದ್ದವರಾರು ಎಂದು ತಿಳಿಯಲು ಧರ್ಮಾಧಿಕರಣರು ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯರೊಡಗೂಡಿ ಹೊನ್ನನ್ನು ಹೂತಿಟ್ಟ ಆಲದ ಮರದ ಸಮೀಪಕ್ಕೆ ಬಂದು ಅಷ್ಟವಿಧಾರ್ಚನೆಯಿಂದ ಮರವನ್ನು ಅರ್ಚಿಸಿ ಅನಂತರ ಅವರಿಬ್ಬರನ್ನೂ ವಿಚಾರಿಸಿ ಆ ಮರವನ್ನು ಕುರಿತು ನೀನಾದರೋ ಯಕ್ಷಾದಿ ದಿವ್ಯ ದೇವತಾವಾಸವೂ ಆದ ವೃಕ್ಷವಾಗಿರುವೆ. ಆದ್ದರಿಂದ ನಿನ್ನ ಸಾಕ್ಷಿ ಮಾಡಿ ಕೇಳುವೆವು. ನೀನು ನಿಜವನ್ನೇ ನುಡಿಯೆಂದು ಹೇಳಿದರು.
ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1. ವೃಕ್ಷಸಾಕ್ಷಿ ಪಾಠದಲ್ಲಿ ನೀವು ಮೆಚ್ಚುವ ಪಾತ್ರ ಯಾವುದು? ಏಕೆ?
ಉ: ಅತಿ ಕುಟಿಲ ಮನಸ್ಸುಳ್ಳವನಾದ ದುಷ್ಟಬುದ್ಧಿಯು ಧರ್ಮಬುದ್ಧಿ ಮತ್ತು ತಾನು ಇಬ್ಬರೂ ಸೇರಿಯೇ ಸಂಪಾದಿಸಿದ ಸಂಪತ್ತನ್ನು ಮನೆಗೆ ತೆಗೆದುಕೊಂಡು ಹೋಗಲು ಬಿಡದೇ ಅದನ್ನು ಮರದ ಕೆಳಗೆ ಹೂತಿಡಲು ಧರ್ಮಬುದ್ಧಿಯನ್ನು ಒಪ್ಪಿಸುವಲ್ಲಿ ಯಶಸ್ವಿಯಾಗುತ್ತಾನೆ. ಧರ್ಮಬುದ್ಧಿಗೆ ಗೊತ್ತಾಗದ ಹಾಗೆ ಹೂತಿಟ್ಟಿದ್ದ ಹೊನ್ನನ್ನು ತಾನೇ ತೆಗೆದು ಅದರ ಕಳುವಿನ ಆರೋಪವನ್ನು ಧರ್ಮಬುದ್ಧಿಯ ಮೇಲೆ ಹೊರಿಸುತ್ತಾನೆ. ಕೊನೆಗೆ ಇಬ್ಬರೂ ಧರ್ಮಾದಿಕರಣರಲ್ಲಿಗೆ ಬಂದು ವ್ಯಾಜ್ಯ ತೀರ್ಮಾನಿಸುವಂತೆ ಕೇಳಿಕೊಳ್ಳುತ್ತಾರೆ. ನಡೆದುದೆಲ್ಲವನ್ನು ವಿವರಿಸಿ ಧರ್ಮಬುದ್ಧಿಯೆ ಹೊನ್ನನ್ನು ಕದ್ದಿದ್ದಾನೆಂದು ಹೇಳುವ ದುಷ್ಟಬುದ್ಧಿಯು ಅದಕ್ಕೆ ಅಲ್ಲದ್ದ ಮರವೇ ಸಾಕ್ಷಿ ಎನ್ನುವನು. ಮರುದಿನ ಮರದ ಬಳಿ ಸಾಕ್ಷಿ ಕೇಳಲು ಹೋಗುವುದೆಂದು ತೀರ್ಮಾನವಾದಾಗ ಮನೆಗೆ ಬಂದ ದುಷ್ಟಬುದ್ಧಿಯು ತನ್ನ ತಂದೆಯ ಬಳಿ ಮರದ ಪೊಟರೆಯಲ್ಲಿ ಅವಿತು ಸಾಕ್ಷಿ ನುಡಿಯುವಂತೆ ಒತ್ತಾಯಿಸುತ್ತಾನೆ. ಒಲ್ಲದ ಮನಸ್ಸಿನಿಂದ ಅವನ ತಂದೆಯು ಮಗನ ಮೇಲಿನ ವ್ಯಾಮೋಹಕ್ಕೆ ಕಟ್ಟುಬಿದ್ದು ಮರುದಿನ ಎಲ್ಲರೂ ಬರುವುದಕ್ಕೆ ಮುಂಚೆಯೇ ಮರದ ಪೊಟರೆಯಲ್ಲಿ ಅವಿತು ಕುಳಿತುಕೊಳ್ಳುವನು. ಧರ್ಮಾಧಿಕರಣರು ಧರ್ಮಬುದ್ಧಿ ಮತ್ತು ಧರ್ಮಬುದ್ಧಿಯರನ್ನು ನಿಲ್ಲಿಸಿ ವೃಕ್ಷದ ಸಾಕ್ಷಿ ಕೇಳಿದಾಗ ಪೊಟರೆಯಲ್ಲಿ ಅವಿತಿದ್ದ ದುಷ್ಟಬುದ್ಧಿಯ ತಂದೆಯು ಧರ್ಮಬುದ್ಧಿಯೇ ಹೊನ್ನನ್ನು ಕದ್ದಿರುವನೆಂದಾಗ ಮರವು ಸಾಕ್ಷಿ ನುಡಿಯುವುದೇ ಆದಲ್ಲಿ ಅದು ಸತ್ಯವನ್ನು ಹೇಳದೇ ಏಕೆ ಸುಳ್ಳು ನುಡಿಯುವುದು ಎಂದು ಆಲೋಚಿಸಿದ ಧರ್ಮಬುದ್ಧಿಯು ಮರವನ್ನು ಪ್ರದಕ್ಷಿಣೆ ಹಾಕಿದಾಗ ಅಲ್ಲಿ ಮನುಷ್ಯ ಸಂಚಾರದ ಕುರುಹು ದೊರೆಯುತ್ತದೆ. ಆಗ ಧರ್ಮಬುದ್ಧಿಯು ಉಪಾಯವಾಗಿ ಎಲ್ಲ ವ್ಯಾಪಾರಿಗಳಿಗಿರುವಂತೆ ತನಗೂ ಕೂಡ ಹಣದ ಮೋಹವಿದ್ದುದಾಗಿ ಹೂತಿಟ್ಟ ಹಣವನ್ನು ತೆಗೆಯಲು ಬಂದು ಅದನ್ನು ಮನೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಬೆಳಗಾಗಿದ್ದರಿಂದ ಪೊಟರೆಯಲ್ಲಿ ಅಡಗಿಸಿಟ್ಟುದಾಗಿಯೂ ಮರುದಿನ ತೆಗೆದುಕೊಂಡು ಹೋಗಲು ಬಂದಾಗ ಅಲ್ಲಿ ದೋಡ್ಡದಾದ ಹಾವು ಇತ್ತೆಂದೂ ಅದನ್ನು ಹಾಗೆ ಅಲ್ಲಿಯೇ ಬಿಟ್ಟು ಹೋಗಿದ್ದುದಾಗಿ ತಿಳಿಸಿ ಕಟ್ಟಿಗೆಯನ್ನು ತರಿಸಿ ಪೊಟರೆಗೆ ಹೊಗೆ ಹಾಕಿಸಿ ಹಾವನ್ನು ಓಡಿಸಿ ಅಡಗಿಸಿಟ್ಟ ಹೊನ್ನನ್ನು ಮರಳಿಸುವಂತೆ ಮಾಡಿದಾಗ ಪೊಟರೆಯಲ್ಲಿ ಅಡಗಿ ಕುಳಿತಿದ್ದ ದುಷ್ಟಬುದ್ಧಿಯು ಬೆಂಕಿಗೆ ಆಹುತಿಯಾಗುತ್ತಾನೆ. ಹೀಗೆ ಅತಿ ಆಸೆಗೆ ಒಳಗಾದ ದುಷ್ಟಬುದ್ಧಿಯು ತಾನು ಬೀಸಿದ ಬಲೆಯಲ್ಲಿ ತಾನೆ ಸಿಕ್ಕಿ ಹೊನ್ನಿನ ಜೊತೆ ತನ್ನ ತಂದೆಯನ್ನು ಕಳೆದುಕೊಳ್ಳುತ್ತಾನೆ.
ಸಂದರ್ಭಾನುಸಾರ ಸ್ವಾರಸ್ಯ ಬರೆಯಿರಿ.
1. “ಪೊನ್ನನೆಲ್ಲಮಂ ನೀನೆ ಕೊಂಡೆ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ ‘ವೃಕ್ಷಸಾಕ್ಷಿ’ ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ದುಷ್ಟಬುದ್ಧಿಯು ಧರ್ಮಬುದ್ಧಿಗೆ ಹೇಳಿದನು.
ಸಂದರ್ಭ: ವ್ಯಾಪಾರದಿಂದ ಬಂದ ಸಂಪತ್ತನ್ನು ಹಂಚಿಕೊಳೋಣ ಎಂಬ ಧರ್ಮಬುದ್ಧಿಯ ಸಲಹೆಗೆ ದುಷ್ಟಬುದ್ಧಿಯು ಇಷ್ಟೊಂದು ಹಣವನ್ನು ತೆಗೆದುಕೊಂಡು ಮನೆಯಲ್ಲಿಟ್ಟರೆ ನಮಗೆ ತೊಂದರೆಯಾಗುವುದು. ಆದ್ದರಿಂದ ಖರ್ಚಿಗೆ (ವೆಚ್ಚಕ್ಕೆ) ಬೇಕಾಗುವಷ್ಟು ಮಾತ್ರ ನಮ್ಮ ಬಳಿ ಇಟ್ಟುಕೊಂಡು ಉಳಿದದ್ದನ್ನು ಇಲ್ಲಿಯೇ ಇಡೋಣ ಎಂದನು. ಅದಕ್ಕೆ ಧರ್ಮಬುದ್ಧಿಯೂ ಒಪ್ಪಿಕೊಳ್ಳಲು ಇಬ್ಬರೂ ಸೇರಿ ಅದನ್ನು ಅಲ್ಲಿಯೇ ಇದ್ದ ಆಲದ ಮರದಕೆಳಗೆ ಹೂತಿಟ್ಟರು. ಕೆಲವು ದಿನಗಳು ಕಳೆದ ಮೇಲೆ ದುಷ್ಟಬುದ್ಧಿಯು ಧರ್ಮಬುದ್ಧಿಗೆ ಗೊತ್ತಾಗದ ಹಾಗೆ ಸಂಪತ್ತನ್ನು ಬಚ್ಚಿಟ್ಟ ಸ್ಥಳಕ್ಕೆ ಹೋಗಿ ಸಂಪತ್ತೆಲ್ಲವನ್ನೂ ತೆಗೆದುಕೊಂಡು ಗುಂಡಿಯನ್ನು ಮೊದಲಿನಂತೆಯೇ ಮುಚ್ಚಿಟ್ಟನು. ಮತ್ತೆ ಕೆಲವು ದಿನಗಳು ಕಳೆದ ಮೇಲೆ ತಾನೇ ಧರ್ಮಬುದ್ಧಿಯನ್ನು ಕರೆದು ತನಗೆ ವ್ಯಯಕ್ಕಾಗಿ ಹಣವು ಬೇಕಿತ್ತೆಂದು ಸಂಪತ್ತನ್ನು ಹೂತಿಟ್ಟ ಕಡೆ ಹೋಗಿ ತರೋಣವೆಂದು ಅವನನ್ನು ಕರೆದುಕೊಂಡು ಹೋಗಿ ಅಲ್ಲಿ ಅದು ಇರದಿದ್ದರಿಂದ ನೀನೆ ಎಲ್ಲವನ್ನು ತೆಗೆದುಕೊಂಡೆ ಎಂದು ಮತ್ತೆ ಧರ್ಮಬುದ್ಧಿಯ ಮೇಲೆ ಆರೋಪವನ್ನು ಮಾಡುವಾಗ ಮೇಲಿನ ಮಾತು ಬಂದಿದೆ.
ಸ್ವಾರಸ್ಯ: ಹಣವನ್ನು ತಾನೇ ದೋಚಿ ಅದನ್ನು ಮರೆಮಾಚುವ ಉದ್ದೇಶದಿಂದ ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಆರೋಪ ಹೊರಿಸಲು ಯತ್ನಿಸುತ್ತಿರುವುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.
2. “ಈತನ ಮಾತು ಅಶ್ರುತಪೂರ್ವಮ್”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ ‘ವೃಕ್ಷಸಾಕ್ಷಿ’ ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಧರ್ಮಾಧಿಕರಣರು ಹೇಳಿದರು.
ಸಂದರ್ಭ: ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಗಳಿಬ್ಬರೂ ವ್ಯಾಪಾರದಿಂದ ತಾವು ಸಂಪಾದಿಸಿದ ಹಣವನ್ನು ದುಷ್ಟಬುದ್ಧಿಯ ಸಲಹೆಯಂತೆ ಖರ್ಚಿಗೆ ಬೇಕಾದಷ್ಟು ಹಣವನ್ನು ಮಾತ್ರ ತಮ್ಮ ಬಳಿ ಇರಿಸಿಕೊಂಡು ಉಳಿದದ್ದನ್ನು ಒಂದು ಆಲದ ವೃಕ್ಷದ ಬಳಿ ಹೂತಿಟ್ಟರು. ಪಾಪಬುದ್ಧಿಯಿಂದ ಕೂಡಿದ ದುಷ್ಟಬುದ್ಧಿಯು ಧರ್ಮಬುದ್ಧಿಗೆ ಗೊತ್ತಾಗದ ಹಾಗೆ ಆ ಸಂಪತ್ತನ್ನು ತೆಗೆದುಕೊಂಡು ಕಳ್ಳತನದ ಆರೋಪವನ್ನು ಧರ್ಮಬುದ್ಧಿಯ ಮೇಲೆ ಹೊರಿಸಿದನು. ಸಂಪತ್ತನ್ನು ತೆಗೆದುಕೊಂಡವರಾರೆಂದು ತಮ್ಮ ವ್ಯಾಜ್ಯವನ್ನು ಬಗೆಹರಿಸಲು ಅವರು ಧರ್ಮಾಧಿಕರಣರು ಇರುವಲ್ಲಿಗೆ ಬಂದರು. ನಡೆದುದೆಲ್ಲವನ್ನು ಧರ್ಮಾಧಿಕರಣರಿಗೆ ವಿವರಿಸಿದ ದುಷ್ಟಬುದ್ಧಿಯು ಹೊನ್ನೆಲ್ಲವನ್ನು ಧರ್ಮಬುದ್ಧಿಯೇ ತೆಗೆದುಕೊಂಡನೆಂಬುದಕ್ಕೆ ಅಲ್ಲಿದ್ದ ಆಲದ ಮರವೇ ಸಾಕ್ಷಿ ಎಂದಾಗ ಧರ್ಮಾಧಕರಣರು ತಮ್ಮ ಮನಸ್ಸಿನಲ್ಲಿ ಮೇಲಿನಂತೆ ಅಂದುಕೊಂಡರು.
ಸ್ವಾರಸ್ಯ: ವೃಕ್ಷವು ಸಾಕ್ಷಿನುಡಿಯುವ ಬಗ್ಗೆ ಧರ್ಮಾಧಿಕರಣರು ಆಶ್ಚರ್ಯ ವ್ಯಕ್ತಪಡಿಸುವ ಸನ್ನಿವೇಶ ಇಲ್ಲಿ ವ್ಯಕ್ತವಾಗಿದೆ.
2. “ನಿನ್ನ ಪಳುವಗೆ ನಮ್ಮ ಕುಲವನೆಲ್ಲಮನಳಿವ ಬಗೆ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ ‘ವೃಕ್ಷಸಾಕ್ಷಿ’ ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ದುಷ್ಟಬುದ್ಧಿಯ ತಂದೆ (ಪ್ರೇಮಮತಿ)ಯು ದುಷ್ಟಬುದ್ಧಿಗೆ ಹೇಳಿದನು.
ಸಂದರ್ಭ: ಹೊನ್ನನ್ನು ತಾನು ಕದ್ದ ಧರ್ಮಬುದ್ಧಿಯು ಅದರ ಆರೋಪವನ್ನು ಹೊರಿಸಿ ಅದಕ್ಕೆ ವೃಕ್ಷವೇ ಸಾಕ್ಷಿಯೆಂದು ಧರ್ಮಾಧಿಕರಣರಿಗೆ ಹೇಳಿದನು. ಆ ಹೊತ್ತಿಗೆ ಸಂಜೆಯಾದ್ದರಿಂದ ಮರುದಿನ ವೃಕ್ಷನ್ಯಾಯ ಕೇಳುವುದೆಂದು ತೀರ್ಮಾನವಾಯಿತು. ಮನೆಗೆ ಮರಳಿದ ದುಷ್ಟಬುದ್ಧಿಯು ತನ್ನ ತಂದೆಯನ್ನು ಮರದ ಪೊಟರೆಯಲ್ಲಿ ಅಡಗಿ ಧರ್ಮಾಧಿಕರಣರು ಆರೋಪದ ಕುರಿತು ಕೇಳಿದಾಗ ಧರ್ಮಬುದ್ಧಿಯೇ ಹೊನ್ನನ್ನು ಕದ್ದವನೆಂದು ಹೇಳುವಂತೆ ಒತ್ತಾಯಿಸಿದನು. ಆಗ ಮಗನಿಗೆ ಬುದ್ಧಿ ಹೇಳುತ್ತ ಪ್ರೇಮಮತಿ (ತಂದೆ)ಯು ಪರಧನ, ವಿಶ್ವಾಸಘಾತಕತನ, ಸ್ವಾಮಿದ್ರೋಹ ಇವೆಲ್ಲವೂ ಎಲ್ಲ ಕಾಲದಲ್ಲಿಯೂ ಹಾನಿಯನ್ನುಂಟು ಮಾಡುವಂತವು. ನಿನ್ನ ದುರಾಸೆಯಿಂದಾದ ಕಳ್ಳತನವು ನಮ್ಮ ಕುಲವನ್ನೇ ನಾಶ ಮಾಡುವುದು ಎಂದು ಹೇಳಿದನು.
ಸ್ವಾರಸ್ಯ: ಅನೀತಿ, ಅನ್ಯಾಯ, ಅಕ್ರಮಗಳಿಂದ ಸಂಪಾದಿಸುವುದು ಎಂದಿಗೂ ಒಳ್ಳೆಯದನ್ನು ಮಾಡಲಾರದು ಎಂದು ಮೇಲಿನ ವಾಕ್ಯವು ಸೂಚಿಸುವುದು.
4. “ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗಂ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ ‘ವೃಕ್ಷಸಾಕ್ಷಿ’ ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ದುಷ್ಟಬುದ್ಧಿಯ ತಂದೆ (ಪ್ರೇಮಮತಿ) ಯು ಮರದ ಪೊಟರೆಯಲ್ಲಿ ಅಡಗಿದ್ದು ಹೇಳಿದನು.
ಸಂದರ್ಭ: ವ್ಯಾಪಾರದಲ್ಲಿ ದೊರೆತು ಹೂತಿಟ್ಟ ಹಣದ ಕಳುವಿನ ಆರೋಪವನ್ನು ದುಷ್ಟಬುದ್ಧಿಯು ಧರ್ಮಬುದ್ಧಯ ಮೇಲೆ ಹೊರಿಸುತ್ತಾನೆ. ನ್ಯಾಯ ತೀರ್ಮಾನಕ್ಕಾಗಿ ಧರ್ಮಾಧಿಕರಣರ ಬಳಿ ಬಂದು ನಡೆದುದೆಲ್ಲವನ್ನು ವಿವರಿಸಿ ಧರ್ಮಬುದ್ಧಿಯೇ ಹೊನ್ನನ್ನು ತೆಗೆದವನು ಎಂಬುದಕ್ಕೆ ಆಲದ ಮರವೇ ಸಾಕ್ಷಿ ಎನ್ನುತ್ತಾನೆ. ಮರುದಿನ ಅವರಲ್ಲರೂ ಹೊನ್ನನ್ನು ಅಡಗಿಸಿಟ್ಟಿದ್ದ ಆಲದ ಮರದ ಬಳಿ ಬರುತ್ತಾರೆ. ಮಗನ ಒತ್ತಾಯಕ್ಕೆ ಕಟ್ಟುಬುದ್ದ ದುಷ್ಟಬುದ್ಧಿಯ ತಂದೆ ಈ ಮೊದಲೇ ಮರದ ಪೊಟರೆಯಲ್ಲಿ ಅಡಗಿ ಕುಳಿತಿರುತ್ತಾನೆ. ಧರ್ಮಾಧಿಕರಣರು ವೃಕ್ಷದ ಬಳಿ ವಿಚಾರಿಸಿದಾಗ ಅಲ್ಲಿ ಅಡಗಿ ಕುಳಿತಿದ್ದ ಪ್ರೇಮಮತಿ (ದುಷ್ಟಬುದ್ಧಿಯ ತಂದೆ) ಯು ಮತಿಗೆಟ್ಟು ಧರ್ಮದ ದಾರಿಯನ್ನು ಬಿಟ್ಟು ‘ಪ್ರಕೃತಿ ವಿಕೃತಿಯಾದರೆ ಮನುಷ್ಯನ ಆಯುಷ್ಯವು ಕುಂದುವುದು ಎಂದು ನುಡಿವಂತೆ ಧರ್ಮಬುದ್ಧಿ ಎಲ್ಲ ಸಂಪತ್ತನ್ನು ತೆಗೆದುಕೊಂಡನೆಂದು ಹೇಳುತ್ತಾನೆ.ಸ್ವಾರಸ್ಯ: ಪ್ರಕೃತಿ ಮುನಿದರೆ ಯಾರಿಗೂ ಉಳಿಗಾಲವಿಲ್ಲ. ವಟವೃಕ್ಷವು ಪ್ರಕೃತಿಯ ಕೊಡುಗೆ. ಅದಕ್ಕೆ ವಿರುದ್ಧವಾಗಿ ನಡೆಯುವುದು ವಿಕೃತಿ ಎಂಬುದು ಮೇಲಿನ ವಾಕ್ಯದ ಸ್ವಾರಸ್ಯವಾಗಿದೆ.
5. “ಹುಸಿಯದ ಬೇಹಾರಿಯೇ ಇಲ್ಲ”
ಉ: ಈ ಮೇಲಿನ ವಾಕ್ಯವನ್ನು ದುರ್ಗಸಿಂಹನು ಬರೆದ ಕರ್ನಾಟಕ ಪಂಚತಂತ್ರದಿಂದ ಆರಿಸಲಾದ ‘ವೃಕ್ಷಸಾಕ್ಷಿ’ ಎನ್ನುವ ಗದ್ಯಭಾಗದಿಂದ ಆರಿಸಲಾಗಿದೆ. ಈ ಮಾತನ್ನು ಧರ್ಮಬುದ್ಧಿಯು ಧರ್ಮಾಧಿಕರಣರಿಗೆ ಹೇಳಿದನು.
ಸಂದರ್ಭ: ನ್ಯಾಯವನ್ನು ತೀರ್ಮಾನಿಸಲು ವೃಕ್ಷದ ಸಾಕ್ಷಿ ಕೇಳಲು ತೀರ್ಮಾನಿಸಿದಾಗ ದುಷ್ಟಬುದ್ಧಿಯು ತನ್ನ ತಂದೆಯನ್ನು ಮರದ ಪೊಟರೆಯಲ್ಲಿ ಅಡಗಿಸಿಟ್ಟು ಧರ್ಮಾಧಿಕರಣರು ಪ್ರಶ್ನಿಸಿದಾಗ ಧರ್ಮಬುದ್ಧಿಯೇ ಕದ್ದನೆಂದು ತಂದೆಯಿಂದ ಹೇಳಿಸುವನು. ವೃಕ್ಷವು ಸಾಕ್ಷ್ಯವನ್ನು ನುಡಿಯುವುದೇ ಆದಲ್ಲಿ ಸತ್ಯವನ್ನೇಕೆ ನುಡಿಯಲಾರದು ಎಂದು ಅನುಮಾನಗೊಂಡ ಧರ್ಮಬುದ್ಧಿಯು ಮರವನ್ನೊಮ್ಮೆ ಸುತ್ತು ಹಾಕಿದಾಗ ಪೊಟರೆಯ ಬಳಿ ಮನುಷ್ಯರ ಕುರುಹನ್ನು ಅರಿತು ಇದರ ಮರ್ಮವನ್ನು ತಿಳಿಯಬೇಕೆಂದು ಮೇಲಿನಂತೆ ಹೇಳುವನು. ವ್ಯಾಪಾರಿಬುದ್ಧಿಯಿಂದ ಹೀಗೆ ಮಾಡಿದ್ದಾಗಿಯೂ, ಪೊಟರೆಯಲ್ಲಿ ಅಡಗಿಸಿಟ್ಟ ಸಂಪತ್ತನ್ನು ಪಡೆಯಲು ಬಂದಾಗ ಅದನ್ನು ಹಾವು ಬಳಸಿ ಮಲಗಿತ್ತೆಂದೂ, ಈಗ ಹೊಗೆ ಹಾಕಿಸಿ ಹಾವನ್ನು ಓಡಿಸುವೆನು ಮತ್ತು ಅಡಗಿಸಿಟ್ಟ ಹೊನ್ನನ್ನು ಮರಳಿ ಪಡೆಯಬಹುದು ಎಂದು ಪೊಟರೆಗೆ ಬೆಂಕಿ ಹಾಕಿಸಿ ಅಡಗಿಕುಳಿತ ದುಷ್ಟಬುದ್ಧಿಯ ತಂದೆ ಹೊರಗೆ ಬರುವಂತೆ ಮಾಡಿ ನಿಜ ಸಂಗತಿಯನ್ನು ಬಯಲು ಮಾಡುವನು.
ಸ್ವಾರಸ್ಯ: ವ್ಯಾಪಾರ ವೃತ್ತಿಯಲ್ಲಿ ಕೆಲವೊಮ್ಮೆ ಲಾಭಕ್ಕಾಗಿ ಸುಳ್ಳನ್ನು ಹೇಳುವುದು ಅನಿವಾರ್ಯ ಎಂದು ಧರ್ಮಬುದ್ಧಿಯು ಹೇಳುವ ಸಂದರ್ಭ ಇಲ್ಲಿ ವ್ಯಕ್ತವಾಗಿದೆ.
ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
1. ವಡ್ಡಾರಾಧನೆ - ಶಿವಕೋಟ್ಯಾಚಾರ್ಯ : : ಪಂಚತಂತ್ರಂ ----
ಉತ್ತರ: ದುರ್ಗಸಿಂಹ
2. ಕಬ್ಬ – ಕಾವ್ಯ : : ಬೇಹಾರಿ ____
ಉತ್ತರ: ವ್ಯಾಪಾರಿ
3. ಅನೃತ - ಸುಳ್ಳು : : ಕೃತ್ರಿಮ ____
ಉತ್ತರ: ಮೋಸ
4. ಬಂದಲ್ಲದೆ - ಲೋಪ : : ಧೃತಿಗೆಟ್ಟು ____
ಉತ್ತರ: ಆದೇಶ
5. ದೈವ ಭಕ್ತಿ – ತತ್ಪುರುಷ : : ಅಬ್ಜೋದರ ____
ಉತ್ತರ: ಬಹುವ್ರೀಹಿ ಸಮಾಸ
ಪದಗಳನ್ನು ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.
ಪೋಗಲ್ ವೇಳ್ಕುಂ, ತಕ್ಕನಿತು, ಪೂಳ್ದೆಡೆ.
ಪೋಗಲ್ + ಬೇಳ್ಕುಂ = ಪೋಗಲ್ ವೇಳ್ಕುಂ = ಆದೇಶ ಸಂಧಿ
ತಕ್ಕ + ಅನಿತು = ತಕ್ಕನಿತು = ಲೋಪ ಸಂಧಿ
ಪೂಳ್ದ + ಎಡೆ = ಪೂಳ್ದೆಡೆ = ಲೋಪ ಸಂಧಿ
ನೀಡಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ.
ಅತಿಕುಟಿಲ, ಕೈಕೊಳ್ವುದು, ಕಟ್ಟೇಕಾಂತ, ಸ್ವಾಮಿದ್ರೋಹ, ಪರಧನ, ಸಾಕ್ಷಿಮಾಡಿ, ಬಲವಂದು,
ಅತಿಯಾದ + ಕುಟಿಲ = ಕರ್ಮಧಾರಯ ಸಮಾಸ.
ಕೈಯಂ + ಕೊಳ್ವುದು = ಕ್ರಿಯಾ ಸಮಾಸ.
ಕಡಿದು + ಏಕಾಂತ = ಕರ್ಮಧಾರಯ ಸಮಾಸ.
ಸ್ವಾಮಿಗೆ + ದ್ರೋಹ = ತತ್ಪುರುಷ ಸಮಾಸ.
ಪರರ + ಧನ = ತತ್ಪುರುಷ ಸಮಾಸ.
ಧನದ + ಹರಣ = ತತ್ಪುರುಷ ಸಮಾಸ.
ಸಾಕ್ಷಿಯನ್ನು + ಮಾಡಿ = ಕ್ರಿಯಾ ಸಮಾಸ.
ಬಲದಿಂದ + ಬಂದು = ಕ್ರಿಯಾ ಸಮಾಸ.
*****
No comments:
Post a Comment